ತುಮಕೂರಿನಲ್ಲೂ ಲಾಕ್ ಡೌನ್? ಗೊಂದಲಕ್ಕೆ ತೆರೆ ಎಳೆದ ಜಿಲ್ಲಾಧಿಕಾರಿ

1 min read

 

ತುಮಕೂರು ನ್ಯೂಸ್. ಇನ್ (ಜು.13) tumkurnews.in

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 513ಕ್ಕೆ ತಲುಪುತ್ತಿದ್ದಂತೆ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವಂತೆ ಸಾರ್ವಜನಿಕವಾಗಿ ಒತ್ತಾಯ ಕೇಳಿ ಬರುತ್ತಿದೆ.
ಈಗಾಗಲೇ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ 10 ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಬೆಂಗಳೂರಿಗೆ ಅಂಟಿಕೊಂಡಿರುವ ತುಮಕೂರಿನಲ್ಲೂ ಲಾಕ್ ಡೌನ್ ಮಾಡಬೇಕು, ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವುದಿಲ್ಲ ಎನ್ನುವುದು ಜನರ ಅಭಿಪ್ರಾಯವಾಗಿದೆ.
ಆದರೆ ಇದು ಕೆಲವೇ ಜನರ ಅಭಿಪ್ರಾಯವಾಗಿರುವುದರಿಂದ ಮತ್ತು ಲಾಕ್ ಡೌನ್ ಜಾರಿ ಮಾಡುವಂತೆ ಈವರೆಗೂ ಯಾವುದೇ ಸಂಘಸಂಸ್ಥೆಗಳು, ವರ್ತಕರು ಸೇರಿದಂತೆ ಯಾರೊಬ್ಬರೂ ಜಿಲ್ಲಾಡಳಿತಕ್ಕೆ ಲಿಖಿತವಾಗಿ ಮನವಿ ಸಲ್ಲಿಸಿಲ್ಲ. ಹೀಗಾಗಿ ಜನರು ತಮ್ಮಲ್ಲೇ ಚರ್ಚಿಸುವುದು, ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಜಿಲ್ಲಾಡಳಿತ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಕೊನೆ ಪಕ್ಷ ನಗರದಲ್ಲಾದರೂ ಲಾಕ್ ಡೌನ್ ಮಾಡಿ ಎಂದು ಜನ ಒತ್ತಾಯಿಸುತ್ತಿದ್ದಾರೆ. ಆದರೆ, ವಿವಿಧ ವರ್ತಕರ ಸಂಘಟನೆಗಳು ಅರ್ಧ ದಿನಗಳ ಕಾಲ ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಜಾರಿಗೊಳಿಸಿರುವುದರಿಂದ ಪ್ರತ್ಯೇಕವಾಗಿ ಲಾಕ್ ಡೌನ್ ಹೇರುವ ಅಗತ್ಯ ನಗರದಲ್ಲಿ ಕಂಡು ಬಂದಿಲ್ಲ.
ಮುಖ್ಯವಾಗಿ ಯಾವುದೇ ಲಾಕ್ ಡೌನ್ ಜಾರಿ ಮಾಡಿದರೂ ಜನರು ಸರ್ಕಾರ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದಿದ್ದರೆ ಏನು ಮಾಡಿದರೂ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಲಾಕ್ ಡೌನ್ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸುವ ಬದಲಾಗಿ ಜನರು ತಾವೇ ಸ್ವಯಂ ಲಾಕ್ ಡೌನ್ ಹೇರಿಕೊಳ್ಳುವುದು ಉತ್ತಮ.
**
ಲಾಕ್ ಡೌನ್ ಸ್ಪಷ್ಟಪಡಿಸಿದ ಡಿಸಿ:
ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆಯೇ? ಇಲ್ಲವೇ? ಎಂಬ ಜನರ ಗೊಂದಲಕ್ಕೆ ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ಸೋಮವಾರ ತೆರೆ ಎಳೆದಿದ್ದಾರೆ.
‘ತುಮಕೂರು ಜಿಲ್ಲೆಯಲ್ಲಿ ಲಾಕ್ ಡೌನ್ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

You May Also Like

More From Author

+ There are no comments

Add yours