ಅಧಿಕಾರಿಗಳೊಂದಿಗೆ ಡಿಸಿ ವಿಡಿಯೋ ಕಾನ್ಫರೆನ್ಸ್; ಇಲ್ಲಿದೆ ವಿವರ

1 min read

 

 

 

 

 

ಕುಡಿಯುವ ನೀರಿನ ಟ್ಯಾಂಕರ್’ಗಳನ್ನು ಸ್ವಚ್ಛಗೊಳಿಸುವಂತೆ ಸೂಚನೆ

Tumkurnews
ತುಮಕೂರು; ಜಿಲ್ಲೆಯಲ್ಲಿ ಪ್ರಖರ ಬಿಸಿಲಿನ ಜೊತೆಗೆ ಮಳೆಯೂ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮದ ಅಂಗವಾಗಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಟ್ಯಾಂಕರ್’ಗಳನ್ನು ಸ್ವಚ್ಛಗೊಳಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನ್ನಾಡಿದರು. ಕಳೆದ ಆರು ತಿಂಗಳಿನಿಂದ ಸ್ಚಚ್ಛಗೊಳಿಸದ ಟ್ಯಾಂಕ್‍ಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು ಹಾಗೂ ಕಾಲುವೆಗಳಲ್ಲಿ ಕಸ ಮತ್ತು ಹೂಳೆತ್ತುವ ಕೆಲಸವನ್ನು ಮುಖ್ಯಾಧಿಕಾರಿಗಳು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕು ಹಾಗೂ ಜಾನುವಾರು ತೊಟ್ಟಿಗಳನ್ನೂ ಸಹ ಸ್ವಚ್ಛಗೊಳಿಸುವಂತೆ ಸೂಚಿಸಿದರು.
ಸರ್ಕಾರಿ ಶಾಲೆಯ ಜಮೀನುಗಳನ್ನು ಶಾಲೆಯ ಹೆಸರಿಗೆ ನೋಂದಣಿ, ಇ-ಸ್ವತ್ತು ಮಾಡಿಕೊಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಬೇಕು. ಸರ್ಕಾರಿ ಶಾಲೆಗಳಿಗೆ ಖಾತೆ ಮಾಡಿ ಕೊಡುವುದು ಪುಣ್ಯದ ಕೆಲಸ. ಬಿಇಓಗಳು ಪ್ರತಿನಿತ್ಯ ಒಂದು ತಾಸು ಈ ಕೆಲಸಕ್ಕಾಗಿ ಮೀಸಲಿಡಬೇಕು. ಇಓ ಮತ್ತು ತಹಶೀಲ್ದಾರರ ಬಳಿ ತೆರಳಿ ಈ ಕುರಿತಂತೆ ಪರಿಶೀಲಿಸಬೇಕು. ಮೇ 22 ರಿಂದ ಅನ್ವಯವಾಗುವಂತೆ 15 ದಿನದೊಳಗಾಗಿ ಗುರಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಬಿಇಓ, ಇಓ ಹಾಗೂ ತಹಶೀಲ್ದಾರ್‍ಗಳು ವಹಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಮಧುಗಿರಿ ಹಾಗೂ ತುಮಕೂರು(ದ) ಜಿಲ್ಲೆಯ ಡಿಡಿಪಿಐಗಳು ಈ ನಿಟ್ಟಿನಲ್ಲಿ ಪ್ರತಿನಿತ್ಯ ಪರಿಶೀಲಿಸಿ 15 ದಿನದ ನಂತರ ತಮಗೆ ವರದಿ ನೀಡುವಂತೆ ಸೂಚಿಸಿದರು.
ರೈಲ್ವೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಕೂಡದು. ಮಾಲೀಕರುಗಳಿಗೆ ಪರಿಹಾರ ಮೊತ್ತ ಪಾವತಿ ಮತ್ತು ಜಮೀನು ಹಸ್ತಾಂತರ ಪ್ರಕ್ರಿಯೆಗಳು ಯಾವುದೇ ಕಾರಣಕ್ಕೂ ವಿಳಂಬವಾಗಕೂಡದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಎನ್‍ಡಿಆರ್‍ಎಫ್ ನಿಯಮಗಳ ಪ್ರಕಾರ ಮಳೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ಪಾವತಿಯಾಗಬೇಕು. ತಹಶೀಲ್ದಾರ್‍ಗಳು ಈ ನಿಟ್ಟಿನಲ್ಲಿ ಕ್ರಮವಹಿಸಬೇಕು. ಗ್ರಾಮ ಸಹಾಯಕರು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಫೀಲ್ಡ್ ವಿಸಿಟ್ ಮಾಡಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಡಾ.ಕೆ ವಿದ್ಯಾಕುಮಾರಿ ಮಾತನಾಡಿ, ಸ್ವಚ್ಛಭಾರತ್ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಕುರಿತಂತೆ ಆಡಿಟ್ ಕೈಗೊಳ್ಳಲು ಕೇಂದ್ರ ತಂಡ ಜಿಲ್ಲೆಗೆ ಆಗಮಿಸಿದ್ದು, 2013 ರಿಂದ 2023ರವರೆಗಿನ ಆಡಿಟ್ ನಡೆಸಲಿದೆ. ಕನಿಷ್ಠ 15 ರಿಂದ 25 ಗ್ರಾಮ ಪಂಚಾಯತಿಗಳಿಗೆ ಕೇಂದ್ರ ತಂಡ ಭೇಟಿ ನೀಡಲಿದ್ದು, ಈ ಸಂದರ್ಭ ಇಓಗಳು ಮತ್ತು ಪಿಡಿಓಗಳು ಖುದ್ದು ಹಾಜರಿದ್ದು ಸಮರ್ಪಕ ದಾಖಲೆಗಳನ್ನು ಒದಗಿಸಬೇಕು ಎಂದು ಸೂಚಿಸಿದರು.
ಘನತ್ಯಾಜ್ಯ ವಿಲೇವಾರಿಗೆ ನಿವೇಶನ ಗುರುತಿಸುವಿಕೆ ಕುರಿತಂತೆ ಮಾತನಾಡಿದ ಅವರು, ಕೆರೆ ಅಂಗಳದಲ್ಲಿ ನಿವೇಶನಗಳನ್ನು ಗುರುತಿಸಬಾರದು. ಪ್ರತಿ 2 ಗ್ರಾಮ ಪಂಚಾಯತಿಗೆ ಒಂದರಂತೆ ನಿವೇಶನ ನೀಡಿದರೆ ಒಳಿತು ಎಂದು ಸೂಚಿಸಿದರು.
ಸಭೆಯ ಕೊನೆಯಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳು, ಭೂಮಿ ಪೆಂಡೆಂನ್ಸಿ, ಆಧಾರ್ ಸೀಡಿಂಗ್, ಆರ್‍ಆರ್‍ಟಿ ಪೆಂಡೆಂನ್ಸಿ, ಕೃಷಿ ಗಣತಿ ಕುರಿತಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಡಿಡಿಎಲ್‍ಆರ್ ಸುಜಯ್, ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ತಹಶೀಲ್ದಾರ್ ಸಿದ್ಧೇಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

You May Also Like

More From Author

+ There are no comments

Add yours