ತುಮಕೂರು ನ್ಯೂಸ್.ಇನ್
Tumkurnews.in
ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮರ್ಯಾದ ಪುರುಷ ಪ್ರಭು ಶ್ರೀರಾಮಚಂದ್ರನ ಭವ್ಯವಾದ ಮಂದಿರಕ್ಕೆ ನಮ್ಮ ತುಮಕೂರಿನ ಮೂರು ಪ್ರಮುಖ ಪುಣ್ಯ ಕ್ಷೇತ್ರಗಳ ಮಣ್ಣನ್ನು ಬಳಸಲಾಗುತ್ತದೆ!
ತುಮಕೂರಿನ ಸಿದ್ಧಗಂಗಾ ಮಠ, ಕುಣಿಗಲ್ ತಾಲ್ಲೂಕಿನ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ಕ್ಷೇತ್ರ ಹಾಗೂ ತುಮಕೂರಿನ ದೇವರಾಯನದುರ್ಗ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಿಂದ ಮಣ್ಣನ್ನು ಸಂಗ್ರಹಿಸಿ ಅದನ್ನು ಅಯೋಧ್ಯೆಗೆ ತಲುಪಿಸಲಾಗುತ್ತಿದೆ.
ದೇಶದ ವಿವಿಧ ರಾಜ್ಯಗಳ ಪ್ರಮುಖ ದೇವಾಲಯ ಹಾಗೂ ಧಾರ್ಮಿಕ ಕ್ಷೇತ್ರಗಳ ಮಣ್ಣನ್ನು ಸಂಗ್ರಹಿಸಿ ಅದನ್ನು ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ತಲುಪಿಸುವ ಜವಾಬ್ದಾರಿಯನ್ನು ವಿಶ್ವಹಿಂದೂ ಪರಿಷತ್ ಸೇರಿದಂತೆ ಅನೇಕ ಹಿಂದುಪರ ಸಂಘಟನೆಗಳು ಮಾಡುತ್ತಿವೆ.
ನಮ್ಮ ತುಮಕೂರಿನ ಒಂದು ಹಿಡಿ ಮಣ್ಣು ಅಯೋಧ್ಯೆಯ ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. ತುಮಕೂರಿನ ಸಿದ್ಧಗಂಗಾ ಮಠಾದೀಶರಾದ ಶ್ರೀ ಸಿದ್ದಲಿಂಗ ಸ್ವಾಮಿಗಳು ಈ ಮೂರು ದೇವಾಲಯಗಳ ಮಣ್ಣನ್ನು ವಿಶ್ವ ಹಿಂದು ಪರಿಷತ್ತಿನ ರಾಮ ಭಕ್ತರಿಗೆ ಜುಲೈ 25 ರಂದು ಹಸ್ತಾಂತರಿಸಲಿದ್ದಾರೆ.
ಉತ್ತರ ಪ್ರದೇಶದ ಪೈಜಾಬಾದ್ ಜಿಲ್ಲೆಯ ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆ ನೆರವೇರಿಸಲಿದ್ದಾರೆ.
+ There are no comments
Add yours