ತುಮಕೂರು ನ್ಯೂಸ್.ಇನ್
Tumkurnews.in
ತುಮಕೂರು ನಗರದ ಎಂ.ಜಿ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ದಿಢೀರನೆ ರಸ್ತೆ ಕುಸಿದಿರುವ ಘಟನೆ ನಡೆದಿದೆ.
ಎಂಜಿ ರಸ್ತೆಯ ಮಹಾದೇವ ವೆರೈಟಿ ಸ್ಟೋರ್ ಸರ್ಕಲ್ ಮತ್ತು ವಿವೇಕಾನಂದ ರಸ್ತೆಯ ಮಧ್ಯ ಭಾಗದಲ್ಲಿನ ವೃತ್ತದಲ್ಲಿ ರಸ್ತೆ ಕುಸಿದಿದ್ದು, ಆಳವಾದ ಗುಂಡಿ ಬಿದ್ದಿದೆ.
ಗುರುವಾರ ನಗರದಲ್ಲಿ ಭಾರಿ ಮಳೆ ಸುರಿದಿದ್ದು, ಅದರ ಹಿಂದೆಯೇ ಶುಕ್ರವಾರ ರಸ್ತೆ ಕುಸಿದಿದೆ. ಸದಾ ಜನರ ಓಡಾಟ, ವಾಹನಗಳ ಸಂಚಾರ ಅಧಿಕವಿರುವ ಈ ರಸ್ತೆ ಕುಸಿದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ಆಕಸ್ಮಾತ್ತಾಗಿ ಗುರುವಾರ ಮಳೆ ಬರುತ್ತಿದ್ದ ಸಮಯದಲ್ಲೇನಾದರೂ ಈ ಗುಂಡಿ ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಮಳೆ ನೀರು ರಸ್ತೆಯಲ್ಲಿ ತುಂಬಿದಾಗ ರಸ್ತೆ ಕುಸಿದಿರುವುದು ಗಮನಕ್ಕೆ ಬರುತ್ತಿರಲಿಲ್ಲ. ಆಗ ಯಾವುದಾದರೂ ವಾಹನ ಅಥವಾ ಪಾದಚಾರಿಗಳು ಈ ಕಂದಕದೊಳಗೆ ಬಿದ್ದಿದ್ದರೆ ಭಾರಿ ಅಪಾಯವಾಗಿರುತ್ತಿತ್ತು. ಅದೃಷ್ಟವಶಾತ್ ಮಳೆ ಇಲ್ಲದಾಗ ಗುಂಡಿ ಬಿದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಗುರುವಾರದ ಮಳೆಯಿಂದಾಗಿ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಎಂಜಿ ರಸ್ತೆಯಲ್ಲಿ ಕುಸಿದಿರುವ ರಸ್ತೆ ದುರಸ್ತಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕರ ಸೂಚನೆಯಂತೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ದುರಸ್ತಿ ಆರಂಭಿಸಿದ್ದಾರೆ.
+ There are no comments
Add yours