Tumkurnews
ತುಮಕೂರು; ಉದ್ದೇಶಿಯ ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಗೆ ರೈತರ ವಿರೋಧ ವ್ಯಕ್ತವಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಸಂತ್ರಸ್ತ ರೈತರು ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಪ್ರಮುಖವಾಗಿ ರೈತರ ಅಭಿಪ್ರಾಯ ಪಡೆಯದೇ ಪ್ರಾಧಿಕಾರ ರಚನೆ ಮಾಡಿರುವುದು ರೈತರನ್ನು ಕೆರಳಿಸಿದ್ದು, ಮತ್ತೊಂದು ರೈತ ಹೋರಾಟಕ್ಕೆ ಜಿಲ್ಲೆಯ ಸಾಕ್ಷಿಯಾಗುತ್ತಿದೆ.
ಪ್ರತಿಭಟನೆ ಆರಂಭ; ಭೂಮಿ ಕಳೆದುಕೊಳ್ಳುವ ರೈತರೊಂದಿಗೆ ಚರ್ಚೆ ನಡೆಸದೆ ಏಕಾಎಕಿ ಚೆನ್ನೈ -ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಪ್ರಾಧಿಕಾರ ರಚನೆ ಮಾಡಿರುವ ಸರಕಾರದ ಕ್ರಮ ಕಾನೂನು ಬಾಹಿರವಾಗಿದ್ದು, ಕೂಡಲೇ ಸದರಿ ಪ್ರಾಧಿಕಾರವನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ಚೆನ್ನೈ ಇಂಡಸ್ಟ್ರೀಯಲ್ ಕಾರಿಡಾರ್ ಯೋಜನಾ ಪ್ರದೇಶಗಳ ರೈತರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರೈತರು ವಿದ್ಯುತ್ ಉತ್ಪಾದನೆ ಮಾಡಿದರೆ ಸರ್ಕಾರದಿಂದ ಸಹಾಯಧನ; ಜಿಲ್ಲಾಧಿಕಾರಿ
ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ನಗರದ ಟೌನ್ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರಕಾರದ ಧೋರಣೆಯನ್ನು ರೈತರು ಖಂಡಿಸಿ ಉಪ ವಿಭಾಗಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.
ಅವಕಾಶ ನೀಡಲ್ಲ; ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ ಬೈಯಾರೆಡ್ಡಿ ಮಾತನಾಡಿ ಸರ್ಕಾರದ ವಿರುದ್ಧ ಕಿಡಿಕಾರಿದರು. ರೈತರಿಗೆ ಕನಿಷ್ಟ ಸೌಜನ್ಯಕ್ಕೂ ಮಾಹಿತಿ ನೀಡದೆ ಯೋಜನಾ ವ್ಯಾಪ್ತಿಗೆ ಬರುವ ಸುಮಾರು132 ಗ್ರಾಮಗಳನ್ನು ಹಂತ ಹಂತವಾಗಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಇದಕ್ಕೆ ಎಂದಿಗೂ ನಾವು ಅವಕಾಶ ನೀಡುವುದಿಲ್ಲ. ಬೇರೆಲ್ಲಾ ವಿಚಾರಗಳಲ್ಲಿ ಸಂವಿಧಾನದ ನೀತಿ, ನಿಯಮಗಳು ಪಾಲನೆಯಾದರೆ, ರೈತರ ವಿಚಾರದಲ್ಲಿ ಮಾತ್ರ ಸಂವಿಧಾನ ವಿರೋಧಿ ನೀತಿಗಳೇ ಹೆಚ್ಚಾಗಿವೆ ಎಂದು ಆರೋಪಿಸಿದರು.
ತುಮಕೂರು; ಹಾಲು ಒಕ್ಕೂಟದಿಂದ ರೈತರಿಗೆ ಭಾರೀ ಮೋಸ; ಅಕ್ರಮ ಬಯಲಿಗೆಳೆದ ಯುವ ರೈತ
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗು ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಸರಕಾರದ ನಡೆ ರೈತರನ್ನು ಕತ್ತಲಲ್ಲಿ ಇಡುವಂತೆ ಮಾಡಿದೆ. ಕನಿಷ್ಟ ಪಕ್ಷ ಜಿಲ್ಲಾಡಳಿತದ ಬಳಿಯೂ ಇದರ ಸ್ಪಷ್ಟ ಮಾಹಿತಿ ಇಲ್ಲ. ಹಾಗಾಗಿ ರೈತರಿಗೆ ಮಾರಕವಾಗಿರುವ ಚೆನೈ- ಬೆಂಗಳೂರು ಕೈಗಾರಿಕಾ ಪ್ರಾಧಿಕಾರವನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಾಂತ ರೈತ ಸಂಘದ ಬಿ.ಉಮೇಶ್, ಅಜ್ಜಪ್ಪ, ಸಿಐಟಿಯುನ ಸೈಯದ್ ಮುಜೀಬ್ ಮಾತನಾಡಿದರು. ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಅಜ್ಜಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಕೃಷ್ಣಪ್ಪ, ಹೋರಾಟ ಸಮಿತಿಯ ದಯಾನಂದ ಸಾಗರ್, ಶಿವಾನಂದ್, ಷಣ್ಮುಖಪ್ಪ, ಶಿವಣ್ಣ, ವೀರಣ್ಣ, ಕರಿಬಸವಯ್ಯ, ಮಂಜುನಾಥ್, ಪಾಲಾಕ್ಷ, ಜಯರಾಮಯ್ಯ, ರುದ್ರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ರೈತರ ಸಮಸ್ಯೆ ಬಗ್ಗೆ ನಾವ್ಯಾರೂ ಮಾತನಾಡುತ್ತಿಲ್ಲ; ಬಿಜೆಪಿ ಸಭೆಯಲ್ಲಿ ಮಾಧುಸ್ವಾಮಿ ಬೇಸರ
+ There are no comments
Add yours