Tumkurnews
ತುಮಕೂರು/ಉತ್ತರಕನ್ನಡ; ಐಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ತುಮಕೂರಿನ ಮರಳೂರು ದಿಣ್ಣೆ ನಿವಾಸಿಯೋರ್ವನ ಮನೆ ಮೇಲೆ ಭಾನುವಾರ ಎನ್.ಐ.ಎ ಅಧಿಕಾರಿಗಳು ದಾಳಿ ನಡೆಸಿದ್ದು, ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮುನ್ನ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಶನಿವಾರ ಮಧ್ಯರಾತ್ರಿ ಇಬ್ಬರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತುಮಕೂರಿನಲ್ಲಿ ದೆಹಲಿ ಹಾಗೂ ಬೆಂಗಳೂರು ಮೂಲದ ಎನ್ಐಎ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ತುಮಕೂರಿನಲ್ಲಿ ವಶಕ್ಕೆ ಪಡೆದಿರುವವನು ಇಲ್ಲಿನ ಎಚ್.ಎಂ.ಎಸ್ ಯುನಾನಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಈತ ಮಹಾರಾಷ್ಟ್ರ ಮೂಲದ ಮೆಡಿಕಲ್ ವಿದ್ಯಾರ್ಥಿಯಾಗಿದ್ದು, ಮರಳೂರು ದಿಣ್ಣೆಯಲ್ಲಿ ವಾಸವಿದ್ದ ಎನ್ನಲಾಗಿದೆ.
ಈತ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಮೇಲೂ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕಾಲೇಜು ಕಟ್ಟಡ ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಅವರಿಗೆ ಸೇರಿದ್ದಾಗಿದ್ದು, ಎಚ್ಎಂಎಸ್ ಸಂಸ್ಥೆಗೆ ಸೇರಿದ ಈ ಕಟ್ಟಡವನ್ನು ಬಾಡಿಗೆ ಪಡೆದು ಮುಂಬೈ ಮೂಲದವರು ಕಾಲೇಜು ನಡೆಸುತ್ತಿದ್ದಾರೆ.
ಭಟ್ಕಳದ ಮನೆಯೊಂದರ ಮೇಲೂ ದಾಳಿ ಮಾಡಿರುವ ಎನ್ಐಎ ಅಧಿಕಾರಿಗಳು ಯುವಕರಿಬ್ಬರನ್ನ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಸಂಬಂಧವಿಲ್ಲ; ಎನ್.ಐ.ಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾದ ಎಚ್.ಎಂ.ಎಸ್ ಯುನಾನಿ ಕಾಲೇಜಿಗೂ ನಮ್ಮ ಎಚ್.ಎಂ.ಎಸ್ ಶಿಕ್ಷಣ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಡಾ.ರಫೀಕ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. 15 ವರ್ಷಗಳ ಹಿಂದೆಯೇ ಸದರಿ ಕಟ್ಟಡವನ್ನು ಮುಂಬೈ ಮೂಲದವರಿಗೆ ಬಾಡಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
+ There are no comments
Add yours