ಮಹಿಳೆಯರೂ ಸೇರಿದಂತೆ ನೂರಾರು ದತ್ತಭಕ್ತರಿಂದ ದತ್ತಪೀಠ ಯಾತ್ರೆ
ತುಮಕೂರು: ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಸೇನೆವತಿಯಿಂದ ಆಯೋಜಿಸಿರುವ ದತ್ತಜಯಂತಿಯಲ್ಲಿ ಪಾಲ್ಗೊಳ್ಳಲು ಗುರುವಾರ ನಗರದಿಂದ ನೂರಾರು ದತ್ತ ಮಾಲಾಧಾರಿ ಭಕ್ತರು ತೆರಳಿದರು.
ಬಿಜಿಎಸ್ ವೃತ್ತದ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಾಲಾಧಾರಿಗಳು ಗುಬ್ಬಿ ವೃತ್ತದ ಕುಂಟಮ್ಮನ ತೋಟದ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಪಾದಯತ್ರೆ ಸಾಗಿ, ಅಲ್ಲಿಪೂಜೆ ಸಲ್ಲಿಸಿ ನಂತರ ಆರು ಬಸ್ಗಳಲ್ಲಿ ದತ್ತಪೀಠದತ್ತ ಪ್ರಯಾಣ ಬೆಳೆಸಿದರು.
ನಾಗರಕಟ್ಟೆ ಗಣಪತಿ ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊರಟಗೆರೆ ತಾಲ್ಲೂಕು ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ದತ್ತಪೀಠ ಹಿಂದೂಗಳ ಪವಿತ್ರಧಾರ್ಮಿಕ ಕೇಂದ್ರ, ಇದಕ್ಕೆ ಪೌರಾಣಿಕ ಹಿನ್ನೆಲೆಇದೆ. ಅನೇಕ ಋಷಿಮುನಿಗಳು ತಪಸ್ಸು, ಧಾನ್ಯ ಮಾಡಿದ್ದ ಶ್ರದ್ಧಾಕೇಂದ್ರ. ಭಕ್ತರು ಪ್ರತಿ ವರ್ಷ ಮಾಲೆ ಧರಿಸಿ ದತ್ತ ಪೀಠಕ್ಕೆಯಾತ್ರೆ ತೆರಳಿ ದತ್ತತ್ರೇಯರ ಪಾದುಕೆದರ್ಶನ, ಸ್ಪರ್ಶ ಮಾಡಿ ಭಕ್ತಿ ಸಮರ್ಪಿಸುವ ಆಚರಣೆ ಅನಾದಿ ಕಾಲದಿಂದಲೂ ನಡೆದುಬರುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಸೊಗಡು ಶಿವಣ್ಣ, ಗಾರ್ಡನ್ ರಸ್ತೆಯ ಅಯ್ಯಪ್ಪ ಸ್ವಾಮಿದೇವಸ್ಥಾನ ಅಧ್ಯಕ್ಷರೂ, ಗುರುಸ್ವಾಮಿಗಳೂ ಆದ ಟಿ.ಬಿ.ಶೇಖರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಮುಖಂಡರಾದ ಮಂಜು ಭಾರ್ಗವ್, ಎಸ್.ಎನ್.ಕೃಷ್ಣಯ್ಯ, ಮಹೇಶ್ ಬೆಳ್ಳಾವಿ, ಕೇಶವಮೂರ್ತಿ, ಮಾರಣ್ಣ, ಗೋಕುಲ ಮಂಜುನಾಥ್ ಮೊದಲಾದವರು ಹಾಜರಿದ್ದು ದತ್ತ ಯಾತ್ರಿಗಳಿಗೆ ಬೀಳ್ಕೊಟ್ಟರು.
ಮಹಿಳೆಯರೂ ಸೇರಿದಂತೆ 300ಕ್ಕೂ ಹೆಚ್ಚು ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿದರು.




+ There are no comments
Add yours