ಹೊಸಳ್ಳಿ ಗ್ರಾಮದ ದೊಡ್ಡಕ್ಕ ಅವರಿಗೆ ಪಡಿತರ ಚೀಟಿ ವಿತರಣೆ: ಜಿಲ್ಲಾಧಿಕಾರಿ
Tumkurnews
ತುಮಕೂರು: ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಕೋರ ಹೋಬಳಿಯ ಹೊಸಳ್ಳಿ ಗ್ರಾಮದ ನಿವಾಸಿ ದೊಡ್ಡಕ್ಕ ಅವರಿಗೆ ಹೊಸ ಪಡಿತರ ಚೀಟಿಯನ್ನು ವಿತರಿಸಿದರು.
ಹೊಸಳ್ಳಿ ಗ್ರಾಮದ ದೊಡ್ಡಕ್ಕ ಅವರ ಮಗ ರಾಜು ಅವರು ವಿಕಲಚೇತನರಾಗಿದ್ದು, ಕುಟುಂಬದ ತುರ್ತು ಪರಿಸ್ಥಿತಿಯನ್ನು ಪರಿಗಣಿಸಿ ದೊಡ್ಡಕ್ಕ ಅವರ ಕಷ್ಟವನ್ನು ಮನಗಂಡು ಮೆಡಿಕಲ್ ಎಮರ್ಜೆನ್ಸಿ (ವೈದ್ಯಕೀಯ ತುರ್ತು) ಅಡಿಯ ಆದ್ಯತೆಯ ಮೇಲೆ ಹೊಸ ಪಡಿತರ ಚೀಟಿಯನ್ನು ವಿತರಿಸಿದರು.
ಪಡಿತರ ಚೀಟಿ ವಿತರಿಸಿದ ನಂತರ ಸ್ಥಳದಲ್ಲಿದ್ದ ಆಹಾರ ನಿರೀಕ್ಷಕ ತಿಪ್ಪೇಸ್ವಾಮಿಯವರಿಗೆ ಮುಂದಿನ ದಿನಗಳಲ್ಲಿ ಇಂತಹ ಗಂಭೀರ ಸ್ವರೂಪದ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರಲ್ಲದೆ, ಇಂತಹವರನ್ನು ಗುರುತಿಸಿ ಅಗತ್ಯ ಇರುವವರಿಗೆ ತ್ವರಿತ ಪಡಿತರ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪಡಿತರ ಚೀಟಿ ಕುಂದುಕೊರತೆಗಳ ಸಭೆ ಜಿಲ್ಲಾದ್ಯಂತ ಪಡಿತರ ಚೀಟಿಗಳ ಸಂಬಂಧವಾಗಿ ಬಂದಿರುವ ವಿವಿಧ ರೀತಿಯ ಕುಂದು ಕೊರತೆಗಳನ್ನು ತ್ವರಿತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲೆಯು 10 ತಾಲೂಕುಗಳಲ್ಲಿಯೂ ಕುಂದು ಕೊರತೆಗಳ ಪರಿಶೀಲನಾ ಸಭೆಯನ್ನು ಹಮ್ಮಿಕೊಂಡು ಜನರ ಸಮಸ್ಯೆಯನ್ನು ಬಗೆಹರಿಸುವ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.
ಪಡಿತರ ಚೀಟಿ ಬಡವರ ಜೀವನಾಡಿ. ಜನರು ತಿಂಗಳುಗಳ ಕಾಲ ಕಚೇರಿಗಳಿಗೆ ಅಲೆಯುವ ಸ್ಥಿತಿ ಉಂಟಾಗಬಾರದು. ಪ್ರತಿಯೊಂದು ಪಡಿತರ ಚೀಟಿ ಸಮಸ್ಯೆಯನ್ನು ನಿಗದಿತ ಗಡುವಿನೊಳಗೆ ಸ್ಪಂದಿಸುವುದು ಸಂಬಂಧಿಸಿದ ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಸೌಮ್ಯ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.




+ There are no comments
Add yours