ತುಮಕೂರು: ಸರ್ಕಾರದಿಂದ 200 ಕೋಟಿ ರೂ. ಅನುದಾನ ಬಿಡುಗಡೆ: ಇಲ್ಲಿದೆ ವಿವರ

1 min read

 

ತುಮಕೂರಿಗೆ 200 ಕೋಟಿ ರೂ ಅನುದಾನ ಬಿಡುಗಡೆ: ಇಲ್ಲಿದೆ ಕಾಮಗಾರಿ ವಿವರ

Tumkurnews.in
ತುಮಕೂರು: ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ, ರಸ್ತೆ ಬದಿ ಚರಂಡಿ ನಿರ್ಮಾಣ, ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣ, ಪಾದಚಾರಿ ಮಾರ್ಗ, ನಗರದ ಒಳ ಮತ್ತು ಹೊರ ವರ್ತುಲ ರಸ್ತೆ, ಪ್ರಮುಖ ವೃತ್ತಗಳು, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ 200 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಅನುದಾನವನ್ನು ಸದ್ಬಳಕೆ ಮಾಡಿಕೊಂಡು ತುಮಕೂರು ನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸಬೇಕೆಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, 2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಸರ್ಕಾರದಿಂದ ತುಮಕೂರು ಸೇರಿ ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮಗ್ರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ತಲಾ 200 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಬಿಡುಗಡೆಯಾಗುವ ಹಣವನ್ನು ಕಾಮಗಾರಿಗಳಿಗೆ ಸದ್ವಿನಿಯೋಗಿಸಿ 2026-27ನೇ ಸಾಲಿನೊಳಗಾಗಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಯೋಜನೆಯಡಿ ಒದಗಿಸಲಾಗುವ 200 ಕೋಟಿ ರೂ.ಗಳ ಅನುದಾನದಲ್ಲಿ ಪರಿಶಿಷ್ಟ ಜಾತಿ, ಗಿರಿಜನ ಉಪಯೋಜನೆಗಳಿಗೆ 24.11ರಷ್ಟು ಮೊತ್ತವನ್ನು ಮೀಸಲಿಡಬೇಕು. ಕಾಮಗಾರಿಗಳಿಗೆ ತಗಲುವ ಅಂದಾಜು ವೆಚ್ಚದ ಕ್ರಿಯಾಯೋಜನೆ ತಯಾರಿಸಬೇಕು. ಕ್ರಿಯಾ ಯೋಜನೆ ತಯಾರಿಸುವಾಗ ಯೋಜನೆಯ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ನಿರ್ದೇಶಿಸಿದರು.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳೊಂದಿಗೆ ಕೇಬಲಿಂಗ್ ಡಕ್ಟ್ಸ್, ಇವಿ ಚಾರ್ಜಿಂಗ್ ಸ್ಟೇಷನ್ಸ್, ಸ್ಮಾರ್ಟ್ ಸ್ಟ್ರೀಟ್ ಲೈಟ್ಸ್, ಗಾರ್ಬೇಜ್ ಕಲೆಕ್ಷನ್, ವೈ-ಫೈ ಪೆಸಿಲಿಟೀಸ್, ಸುಲಭ್ ಶೌಚಾಲಯ್, ಟ್ರಾಫಿಕ್ ವಯೋಲೇಷನ್ ಡಿಟೆಕ್ಷನ್, ಬಿಲ್‌ಬೋರ್ಡ್ ಪ್ರಾವಿಷನ್, ಮೀನು ಮಾರುಕಟ್ಟೆ, ನಂದಿನಿ ಬೂತ್, ಹಾಪ್‌ಕಾಮ್ಸ್, ಮಕ್ಕಳ ಆಟದ ಮೈದಾನ, ಲಾಲ್‌ಬಾಗ್ ಮಾದರಿ ಉದ್ಯಾನವನ ಸೇರಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ನಗರದ ಖಾಸಗಿ ಬಸ್‌ನಿಲ್ದಾಣ ಪುನರಾಭಿವೃದ್ಧಿ, ಲಿಂಗಾಪುರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕಸಾಯಿ ಖಾನೆ, 2 ಕೋಟಿ ರೂ. ವೆಚ್ಚದಲ್ಲಿ ಮಾಂಸ ಮಾರಾಟ ವಲಯಗಳ ನಿರ್ಮಾಣ, 5 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಆವರಣದಲ್ಲಿ ಬಹು ಹಂತದ ವಾಹನ ನಿಲುಗಡೆ ವ್ಯವಸ್ಥೆ, ಅಕ್ಕ-ತಂಗಿ ಕೆರೆ ಬಳಿ ಉದ್ಯಾನವನ ಅಭಿವೃದ್ಧಿ, ಅಮಾನಿಕೆರೆ ಬಳಿ ತಾರಾಲಯ ನಿರ್ಮಾಣ ಹಾಗೂ ಯುವಿ, ಮೆಂಬ್ರೇನ್ ನೀರು ಶುದ್ಧೀಕರಣ ಘಟಕ, ಮರಳೂರು ಕೆರೆಯಲ್ಲಿ ನೀರು ಸಂರಕ್ಷಣಾ ಘಟಕ ನಿರ್ಮಾಣ, ಅಭಿವೃದ್ಧಿಯಾಗದ ಉದ್ಯಾನವನಗಳ ಅಭಿವೃದ್ಧಿ, ಕುಡಿಯುವ ನೀರು ಸರಬರಾಜು ಹಾಗೂ ಬೀದಿ ದೀಪ ವ್ಯವಸ್ಥೆಗಾಗಿ ಈ ಅನುದಾನವನ್ನು ವಿನಿಯೋಗಿಸಬೇಕು ಎಂದು ಸೂಚಿಸಿದರು.
ಅನುದಾನವನ್ನು ನಿಯಮಬದ್ಧವಾಗಿ ಬಳಸಬೇಕು. ಅನುದಾನ ವಿನಿಯೋಗದಲ್ಲಿ ಲೋಪ ಕಂಡುಬಂದರೆ ತನಿಖೆಗೊಳಪಡಿಸಿ ಕಾನೂನು ಕ್ರಮಕ್ಕೆ ಗುರಿಪಡಿಸಲಾಗುವುದು. ಮಣ್ಣಿನ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮಳೆ ಬಂದರೆ ಕಿತ್ತು ಹೋಗುವ ರಸ್ತೆಗಳನ್ನು ನಿರ್ಮಿಸಬಾರದೆಂದು ಎಚ್ಚರಿಕೆ ನೀಡಿದ ಅವರು ನಿರ್ಮಾಣ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ 6 ವಾರ್ಡುಗಳನ್ನು ಹೊರತುಪಡಿಸಿ ಉಳಿದೆಲ್ಲ ವಾರ್ಡುಗಳ ಅಭಿವೃದ್ಧಿಗೆ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಬೇಕು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ:ಅಸ್ಗರ್ ಬೇಗ್, ಪಾಲಿಕೆ ಇಂಜಿನಿಯರ್ ವಿನಯ್, ಸೇರಿದಂತೆ
ಮತ್ತಿತರರು ಹಾಜರಿದ್ದರು.

About The Author

You May Also Like

More From Author

+ There are no comments

Add yours